ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಆನಂದ್, ಪತ್ನಿ ಆಸ್ಪತ್ರೆಯ ಗ್ರೂಪ್ ‘ಡಿ’ ನೌಕರೆ ಅಶ್ವಿನಿ, ಅಶ್ವಿನಿ ಅವರ ತಾಯಿ ಶಶಿಕಲಾ, ಖಾಸಗಿ ಆಸ್ಪತ್ರೆಯ ನರ್ಸ್ ಗಿರಿಜಾಂಭ, ಯನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಪ್ರಕರಣದಲ್ಲಿ ಹಲವು ವೈದ್ಯರು ಹಾಗೂ ಅಧಿಕಾರಿಗಳು ಭಾಗಿಯಾಗಿರುವ ಶಂಕೆವ್ಯಕ್ತವಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಪಾಂಡವಪುರ ಪಟ್ಟಣದ ಟಿಎಚ್ಓ ಕಚೇರಿಯ ಹಿಂಭಾಗದ ಆರೋಗ್ಯ ಇಲಾಖೆಯ ಕ್ವಾಟ್ರಸ್ನಲ್ಲಿ ಕಳೆದ ಹಲವಾರು ತಿಂಗಳಿಂದಲೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಆನಂದ್, ಪತ್ನಿ ಅಶ್ವಿನಿ, ಅಶ್ವಿನಿ ಅವರ ತಾಯಿ ಶಶಿಕಲಾ, ಬಾಬು ನಸಿಂಗ್ ಆಸ್ಪತ್ರೆಯ ನರ್ಸ್ ಗಿರಿಜಾಂಭ ಅವರು ಹೆಣ್ಣುಭ್ರೂಣ ಹತ್ಯೆ ಕೃತ್ಯದಲ್ಲಿ ತೊಡಗಿದ್ದರು. ಘಟನೆ ಸಂಬಂಧ ಸ್ಥಳೀಯರು ನೀಡಿದ ಖಚಿತ ಮಾಹಿತಿಯ ಮೇರೆಗೆ ಭಾನುವಾರ ಮಧ್ಯರಾತ್ರಿ ೧೨ ಗಂಟೆಯ ವೇಳೆಯಲ್ಲಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಉಮೇಶ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಭ್ರೂಣಹತ್ಯೆ ನಡೆಸುತ್ತಿದ್ದ ಸಾರ್ವಜನಿಕ ಆಸ್ಪತ್ರೆಯ ಆಂಬುಲೆನ್ಸ್ ಚಾಲಕ ಆನಂದ್, ಪತ್ನಿ ಅಶ್ವಿನಿ, ತಾಯಿ ಶಶಿಕಲಾ, ಖಾಸಗಿ ಆಸ್ಪತ್ರೆಯ ನರ್ಸ್ ಗಿರಿಜಾಂಭ ಅವರು ಗರ್ಭಿಣೆ ಮಹಿಳೆಗೆ ಭ್ರೂಣಹತ್ಯೆ ಮಾಡುತ್ತಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರು ಕೃತ್ಯ ನಡೆಸುತ್ತಿದ್ದ ಆರೋಪಿಗಳನ್ನು ವಶಕ್ಕೆಪಡೆದು ಭ್ರೂಣಹತ್ಯೆಗೆ ಒಳಗಾಗಿದ್ದ ಮಹಿಳೆಯನ್ನು ತಕ್ಷಣ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳದಲ್ಲಿ ಭ್ರೂಣಹತ್ಯೆಗೆ ಬಳಸುತ್ತಿದ್ದ ಟ್ಯಾಬ್ಲೆಟ್, ಸಿರೆಂಜ್, ಡ್ರಿಪ್ಸ್ ಸೇರಿದಂತೆ ಇತರೆ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಭ್ರೂಣಹತ್ಯೆ ಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ ಅರ್ಧ ಚಿಕಿತ್ಸೆ ನೀಡಿದ್ದರಿಂದ ಮಹಿಳೆಗೆ ಸಂಭವಿಸುವ ಅನಾಹುತವನ್ನು ತಪ್ಪಿಸುವ ಉದ್ದೇಶದಿಂದ ಆಸ್ಪತ್ರೆಯಲ್ಲಿಯೇ ಆರೋಗ್ಯಾಧಿಕಾರಿಗಳು ಅಬಾಷನ್ ಮಾಡಿಸಿದ್ದಾರೆ.
ಡಿಸಿ, ಸಿಇಓ, ಎಸ್ಪಿ ಭೇಟಿ: ಘಟನೆಯ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ.ಕುಮಾರ್, ಜಿಪಂ ಸಿಇಓ ಶೇಖ್ ತನ್ವೀರ್ಆಸಿಫ್, ಎಸ್ಪಿ ಯತೀಶ್, ಡಿಎಚ್ಓ ಡಾ.ಮೋಹನ್ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ್ ಮಾತನಾಡಿ, ಪಟ್ಟಣದ ಟಿಎಚ್ಓ ಕಚೇರಿಯ ಹಿಂಭಾಗದ ಆರೋಗ್ಯ ಇಲಾಖೆಯ ಕ್ವಾಟ್ರಸ್ನಲ್ಲಿ ನಡೆಯುತ್ತಿದ್ದ ಹೆಣ್ಣುಭ್ರೂಣಹತ್ಯೆ ಸ್ಥಳಕ್ಕೆ ಪೊಲೀಸರು, ಆರೋಗ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೃತ್ಯಕ್ಕೆ ಬಳಸಿದ್ದ ವೈದ್ಯಕೀಯ ಪರಿಕರಗಳನ್ನು ವಶಕ್ಕೆಪಡೆದುಕೊಂಡಿದ್ದಾರೆ. ಘಟನೆ ಸಂಬಂಧಿಸಿದಂತೆ ಎಲ್ಲಾ ರೀತಿಯ ತನಿಖೆ ನಡೆಸಿ ಸಂಬಂಧಿಸಿದವರ ವಿರುದ್ದ ನಿಧಾಕ್ಷಿಣ್ಯವಾಗಿ ಕ್ರಮಜರುಗಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ. ಘಟನೆಗೆ ಸಂಬಂಧಿಸಿದಂತೆ ಸರಕಾರಕ್ಕೆ ವರದಿಸಲಾಗುವುದು ಎಂದರು.
ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಆಂಬುಲೆನ್ಸ್ ಚಾಲಕನಾಗಿರುವ ಆರೋಪಿ ಆನಂದ್ ಅವರಿಗೆ ಕಳೆದ ೯ ವರ್ಷದಿಂದ ಹಿಂದೆ ಆರೋಗ್ಯ ಇಲಾಖೆಯ ಕ್ವಾಟ್ರಸ್ ಮಂಜೂರರಾಗಿದೆ. ಕ್ವಾಟ್ರಸ್ನಲ್ಲಿ ಚಾಲಕ ಆನಂದ್, ಆಸ್ಪತ್ರೆಯಲ್ಲಿ ಗ್ರೂಪ್‘ಡಿ’
ನೌಕರೆಯಾಗಿರುವ ಆನಂದ್ ಪತ್ನಿ ಅಶ್ವಿನಿ, ತಾಯಿ ಶಶಿಕಲಾ ವಾಸವಾಗಿದ್ದರು. ಕ್ವಾಟ್ರಸ್ನಲ್ಲಿ ಭ್ರೂಣಹತ್ಯೆ ನಡೆಸುತ್ತಿದ್ದರು.
ಮೈಸೂರು ಮೂಲದ ಮಹಿಳೆಗೆ ಮನೆಯೊಂದರಲ್ಲಿ ಸ್ಕ್ಯಾನಿಂಗ್ ಮಾಡಿಸಿ ನಂತರ ಗರ್ಭಪಾತ ಮಾಡಿಸಿಕೊಳ್ಳುವುದಕ್ಕಾಗಿ ಇಲ್ಲಿಗೆ ಕಳುಹಿಸಿದ್ದಾರೆ ಎನ್ನುವುದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ. ಮಹಿಳೆಗೆ ಅನ್ವಾಂಡೆಟ್ ಕಿಟ್ನಲ್ಲಿ ಐದು ಮಾತ್ರೆಯನ್ನು ನೀಡಿ ನೋವುಬಂದ ಬಳಿಕ ಬನ್ನಿ ಎಂದು ಮಹಿಳೆಯನ್ನು ಖಾಸಗಿ ಲಾಡ್ಜ್ಗೆ ಕಳುಹಿಸಿದ್ದಾರೆ. ನಂತರ ಮಹಿಳೆಗೆ ಗರ್ಭಪಾತ ಮಾಡಲು ಮುಂದಾಗಿದ್ದಾರೆ. ಅನ್ವಾಂಟೆಡ್ ಕಿಟ್ನನ್ನು ಎಲ್ಲಿಂದ ಪಡೆದು ಕೊಂಡರು? ಕಿಟ್ಪಡೆಯಲು ಸಲಹೆ ನೀಡಿದ ವೈದ್ಯರು ಯಾರು? ಇಲ್ಲ ಯಾವುದೇ ವೈದ್ಯರ ಸಲಹೆ ಇಲ್ಲದೆಯೇ ಅನ್ವಾಂಟೆಡ್ ಕಿಟ್ ಪಡೆದುಕೊಂಡಿದ್ದಾರೆಯೇ? ಎನ್ನುವುದು ತನಿಖೆಯಿಂದ ಬಯಲಾಗಬೇಕಿದೆ ಎಂದರು.
ಹಾಡ್ಯ ಗ್ರಾಮದ ಆಲೆಮನೆಯಲ್ಲಿ ನಡೆದ ಹೆಣ್ಣೆಭ್ರೂಣಹತ್ಯೆಗೂ ಈ ಪ್ರಕರಣಕ್ಕೂ ಎರಡುಕ್ಕೂ ಸಂಬಂಧ ಇರಬಹುದೇ? ಇಲ್ಲವೇ? ಎನ್ನುವುದು ತನಿಖೆಯಿಂದಯೇ ಹೊರಬರಬೇಕಾಗಿದೆ. ಸ್ಕ್ಯಾನಿಂಗ್ ಮಾಡಿರುವುದು ಒಂದು ಒಂಟಿ ಮನೆಯಲ್ಲಿ ಎಂಬುದನ್ನು ಮಹಿಳೆ ತಿಳಿಸಿದ್ದಾರೆ. ಕೃತ್ಯ ಟಿಎಚ್ಓ ಕಚೇರಿಯ ಹಿಂಭಾಗದ ಕ್ವಾಟ್ರಸ್ನಲ್ಲಿಯೇ ನಡೆದಿರುವುದರಿಂದ ಮೇಲ್ನೋಟಕ್ಕೆ ಆರೋಗ್ಯ ಇಲಾಖೆಯ ವೈಪಲ್ಯ ಕಂಡು ಬರುತ್ತಿದೆ. ಘಟನೆಯಲ್ಲಿ ಅಧಿಕಾರಿಗಳು ಭಾಗಿಯಾಗಿದ್ದಾರೆಯೇ? ಇಲ್ಲವೋ? ಎನ್ನುವುದು ತನಿಖೆಯಿಂದಲೇ ತಿಳಿದುಬರಬೇಕಾಗಿದೆ, ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಪ್ರಕರಣವನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳು ಮತ್ತು ಪೊಲೀಸರ ನೇತೃತ್ವದಲ್ಲಿ ಸಭೆ ನಡೆಸಿ ಪ್ರಕರಣದ ತನಿಖೆಯನ್ನು ನಡೆಸಲು ವಿಶೇಷ ತಂಡವನ್ನು ರಚಿಸಲಾಗುವುದು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಪತ್ತೆ ಹಚ್ಚಿ ಅವರಿಗೆ ಕಾನೂನುನಡಿ ಶಿಕ್ಷೆಗೆ ಒಳಪಡಿಸಲಾಗುವುದು ಎಂದರು.


